ಜಗದೀಶ್ ಶೆಟ್ಟರ್ ಅವರು ಮತಕ್ಕಾಗಿ ಸ್ವಾಭಿಮಾನವನ್ನು ಮಾರಿಕೊಳ್ಳುತ್ತಿದ್ದಾರೆಯೇ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.
ಹುಬ್ಬಳ್ಳಿ : ಆರ್.ಎಸ್.ಎಸ್ ಮಹತ್ವ ಅರಿತುಕೊಂಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷದ ಭಜರಂಗದಳ ನಿಷೇಧಿಸುವ ಪ್ರಣಾಳಿಕೆಯನ್ನಿಟ್ಟುಕೊಂಡು ಹೇಗೆ ಜನರ ಮುಂದೆ ಹೋಗುತ್ತಾರೆ. ಅವರ ಸ್ವಾಭಿಮಾನ ಎಲ್ಲಿ ಹೋಯ್ತು? ಜಗದೀಶ್ ಶೆಟ್ಟರ್ ಅವರು ಮತಕ್ಕಾಗಿ ಸ್ವಾಭಿಮಾನವನ್ನು ಮಾರಿಕೊಳ್ಳುತ್ತಿದ್ದಾರೆಯೇ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಇದೀಗ ಜಗದೀಶ್ ಶೆಟ್ಟರ್ ಅವರಿಗೆ ಸ್ವಾಭಿಮಾನದ ಪ್ರಶ್ನೆ ಉದ್ಭವವಾಗಿದ್ದು, ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದರು.
ಆರ್.ಎಸ್.ಎಸ್ ಹಿನ್ನೆಲೆಯಿಂದ ಬಂದ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷದ ಭಜರಂಗದಳ ನಿಷೇಧವನ್ನು ವಿರೋಧ ಮಾಡಬೇಕು. ಈ ಹಿಂದೆ ಸ್ವಾಭಿಮಾನದಿಂದ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡ ಅವರ ಪರಿಸ್ಥಿತಿ ನೋಡಿದ್ರೆ ಪಾಪಾ ಅನಿಸುತ್ತದೆ ಎಂದು ಕುಟುಕಿದರು.
ಮುಸ್ಲಿಂ ಸಮುದಾಯವನ್ನು ತೃಪ್ತಿ ಪಡಿಸುವ ಹುನ್ನಾರ: ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧ ಮಾಡುವ ಘೋಷಣೆಗೆ ಪ್ರಸ್ತಾಪ ಮಾಡಿರುವುದನ್ನು ನೋಡಿದರೇ ಮುಸ್ಲಿಂ ಸಮುದಾಯವನ್ನು ತೃಪ್ತಿಪಡಿಸುವ ಕೆಲಸಕ್ಕೆ ಮುಂದಾಗಿದೆ. ಭಜರಂಗದಳ ನಿಷೇಧ ಮಾಡಿ ಕಾಂಗ್ರೆಸ್ ಹಿಂದೂ ಸಮಾಜವನ್ನು ಅಪಮಾನ ಮಾಡಲು ಹೊರಟಿದೆ. ಇದನ್ನು ನೋಡಿದರೇ ಕೋಮುವಾದಿ ಕಾಂಗ್ರೆಸ್ ನೇರವಾಗಿ ಜಾತಿಗೆ ಬೆಂಬಲ ನೀಡುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ. ಇದೇ ಕಾಂಗ್ರೆಸ್’ನ ನೀತಿಯಾಗಿದೆ ಎಂದು ಕೆ.ಎಸ್. ಈಶ್ವರಪ್ಪ ಹರಿಹಾಯ್ದರು.
ಕಾಂಗ್ರೆಸ್ ಭಜರಂಗದಳವನ್ನು ಏಕೆ ನಿಷೇಧ ಮಾಡಬೇಕು ಎಂಬುದೇ ಅವರಲ್ಲಿಯೇ ಗೊಂದಲದ ಗೂಡಾಗಿದೆ. ದೇಶದ ರಕ್ಷಣೆ, ರಾಷ್ಟ್ರ ಭಕ್ತಿ ಮಾಡುವ ಸಂಘಟನೆ ಭಜರಂಗದಳ ಆಗಿದೆ. ಇಂತಹ ಸಂಘಟನೆಯನ್ನು ದೇಶ ವಿರೋಧಿ ಚಟುವಟಿಕೆ ನಡೆಸುವ ಪಿ.ಎಫ್.ಐ ಜೊತೆಗೆ ಹೋಲಿಕೆ ಮಾಡಿ ನಿಷೇಧ ಮಾಡಲು ಹೊರಟಿರುವ ನೀತಿಯೇ ದುರಂತವಾಗಿದೆ. ಈ ಹಿನ್ನೆಲೆಯಲ್ಲಿ ಯುವಕರು ನೇರವಾಗಿ ಹೋರಾಟಕ್ಕೆ ಇಳಿಯುವ ಮುಂಚೆಯೇ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧವನ್ನು ವಾಪಾಸ್ ಪಡೆದುಕೊಳ್ಳಬೇಕೆಂದು ಒತ್ತಾಯಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೇ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮೇಲೆ ಈವರೆಗೆ ಗೌರವವಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷ ಸರ್ಪ ಎಂದು ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ಅಲ್ಲದೇ ಪ್ರಿಯಾಂಕಾ ಖರ್ಗೇ ಮೋದಿಯವರನ್ನು ನಾಲಾಯಕ್ ಎಂದು ಕರೆದಿದ್ದಾರೆ. ಪ್ರಿಯಾಂಕಾ ಖರ್ಗೆ ಆನೆ ಮುಂದೆ ತಿಗಣಿ ಇದ್ದ ಹಾಗೇ. ಹೀಗಾಗಿಯೇ ಇನ್ನಷ್ಟು ಕಾಂಗ್ರೆಸ್ ಪಕ್ಷ ಹಾಳಾಗಲಿ ಎಂಬುದು ಅವರ ಉದ್ದೇಶವಾಗಿದೆ ಎಂದು ಲೇವಡಿ ಮಾಡಿದರು.